25-Feb-2026: ದಾ ನಗರವಾಣಿ ಸುದ್ದಿ
ದಾವಣಗೆರೆ: ಬುಧವಾರ ನಡೆದ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯ ಅದ್ದೂರಿತನಕ್ಕೆ, ಭಕ್ತಿ ಪರಾಕಾಷ್ಠೆಗೆ, ವಿದ್ಯುಕ್ತ ಆಚರಣೆಗೆ ದಾವಣಗೆರೆ ಜನತೆ ಸಾಕ್ಷಿಯಾದರು. ಶಿವಾಜಿ ನಗರದಲ್ಲಿರುವ ನಗರದ ಅಧಿದೇವತೆ ಶ್ರೀ ದುಗ್ಗಮ್ಮನ ದೇವಸ್ಥಾನದ ಸುತ್ತ ಮುತ್ತ ಎಲ್ಲಿ ನೋಡಿದರು ಭಕ್ತರ ಉಧೋ... ಉಧೋ.. ದುಗ್ಗಮ್ಮ ಎನ್ನುವ ಭಕ್ತಿಯ ಧ್ವನಿಯೇ ಕೇಳಿಸುತ್ತಿತ್ತು.
ದಾವಣಗೆರೆ ನಗರದ ನಾಲ್ಕು ದಿಕ್ಕುಗಳಿಂದ ಮಧ್ಯ ರಾತ್ರಿ 12 ಗಂಟೆಯಿAದಲೇ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬಂದಿತು. ಕುಟುಂಬ ಸದಸ್ಯರೆಲ್ಲ ಸೇರಿ ಹಣೆಯ ಮೇಲೆ ವಿಭೂತಿ, ಕುಂಕುಮ ಬಳಿದುಕೊಂಡು, ಕೈಯಲ್ಲಿ ಬೇವು ಹಿಡಿದು ಉಧೋ... ಉಧೋ... ದುಗ್ಗಮ್ಮನ ಎನ್ನುತ್ತ ಭಕ್ತಿಯಿಂದ ದೇವಸ್ಥಾನ ದಾರಿ ಹಿಡಿದರು. ಹರಕೆ ಹೊತ್ತವರು ದೇವಸ್ಥಾನ ಸುತ್ತ ಉರುಳು ಸೇವೆ, ದೀಡು ನಮಸ್ಕಾರ ಹಾಕಿ ದೇವಿಗೆ ತಮ್ಮ ಹರಕೆಯನ್ನು ತೀರಿಸಿದರು.
ನಂತರ ದೇವಸ್ಥಾನ ಆವರಣದಲ್ಲಿ ಹರಕೆ ತೀರಿಸಿದ ಮಕ್ಕಳಿಗೆ ಪೋಷಕರು ಹೊಸ ಬಟ್ಟೆ ತೊಡಿಸಿ, ಆರತಿ ಎತ್ತಿ ಪೂಜೆಯನ್ನು ನೆರವೇರಿಸಿದರು. ರಾತ್ರಿಯಿಂದಲೇ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿತ್ತು. ಜೊತೆ ಹರಕೆ ಕುರಿಗಳನ್ನು ಕೂಡ ಕರೆದುಕೊಂಡು ಬಂದು ಕೊನೆಯ ಪ್ರದಕ್ಷಿಣೆಯನ್ನು ಹಾಕಿದರು. ವೀಲ್ ಚೇರ್ನಲ್ಲಿ ಬಂದು ದೇವಿಯ ದರ್ಶನ ಪಡೆದ ಭಕ್ತೆಯೊಬ್ಬರು ಗಮನ ಸೆಳೆದರು. ದೇವಸ್ಥಾನ ಹೋಗಿ ಬರುವ ಭಕ್ತರಿಗೆ ನಗರದೆಲ್ಲೆಡೆ ಪಾನಕ, ಮಜ್ಜಿಗೆ ವ್ಯವಸ್ಥೆಯಲ್ಲಿ ಸಂಘ-ಸAಸ್ಥೆಗಳಿAದ ಮಾಡಲಾಗಿತ್ತು.
ಬುಧವಾರ ದೇವಿಗೆ ಪದ್ಧತಿ ಪ್ರಕಾರ ಪೂಜೆಯನ್ನು ನೆರವೇರಿಸಿ ಬೆಳಗ್ಗೆ 8 ಗಂಟೆಗೆ ಚರಗ ಚೆಲ್ಲಲಾಯಿತು. ಕೈಯಲ್ಲಿ ಚರಗದ ಪುಟ್ಟಿ ಹಿಡಿದು ಯುವಕರು ಉಘೆ... ಉಘೆ... ದುಗ್ಗಮ್ಮ ಎನ್ನುತ್ತ ಚರಗ ಚೆಲ್ಲಿದರು. ಚರಗ ತಮ್ಮ ಮನೆಯ ಬಳಿ ಬರುತ್ತಿದ್ದಂತೆ ಭಕ್ತರು ಚರಗದ ಕಾಳುಗಳನ್ನು ಪಡೆದು ತಮ್ಮ ತಮ್ಮ ಮನೆಯ ಮೇಲೆ ಎಸೆದರು. ಇದರಿಂದ ತಮ್ಮ ಮನೆಯ ಮೇಲೆ ದೇವಿಯ ಕೃಪೆ ಇರಲಿದೆ ಎನ್ನುವುದು ನಂಬಿಕೆ.
ಉಡುಪು ರಹಿತ ಬೇವಿನ ಉಡುಗೆ ಧರಿಸಿ ಭಕ್ತಿಯನ್ನು ಸಮರ್ಪಿಸುವುದು ನಿಷೇಧವಿದ್ದರೂ ಕೂಡ ಅನೇಕ ಭಕ್ತರು ಬೇವಿನ ಉಡುಗೆಯನ್ನು ಮನೆಯಿಂದಲೇ ಧರಿಸಿ ಬರುತ್ತಿದ್ದರು. ಆದರೆ ದೇವಸ್ಥಾನ ಆವರಣದಲ್ಲಿ ತಡೆದ ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿಗಳು ಭಕ್ತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ನಂತರ ಉಡುಪು ಧರಿಸಿ ಅದರ ಮೇಲೆ ಬೇವು ಸುತ್ತಿಕೊಂಡು ಭಕ್ತಿಯನ್ನು ಸಮರ್ಪಿಸುವಂತೆ ಪ್ರೇರೇಪಿಸಿದರು.
30 ಸಾವಿರ ಕುರಿಗಳ ಬಲಿ: ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಿಂದ ಬುಧವಾರ ಸಂಪೂರ್ಣ ದಾವಣಗೆರೆ ಕಳೆಗಟ್ಟಿತ್ತು. ಪೂಜೆ ನೆರವೇರಿದ ನಂತರ ಹರಕೆ ಕುರಿಗಳನ್ನು ಬಲಿ ಕೊಡಲಾಯಿತು. ಅಂದಾಜಿನ ಪ್ರಕಾರ ಹತ್ತಿರ ಹತ್ತಿರ ಒಟ್ಟು 30 ಸಾವಿರ ಕುರಿಗಳನ್ನು ಬುಧವಾರ ಬಲಿ ಕೊಡಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿ ಬೀಗರು, ಸ್ನೇಹಿತರು, ಬಂಧುಗಳ ಜೊತೆ ಕೂಡ ಭರ್ಜರಿ ಬಾಡೂಟವನ್ನು ದಾವಣಗೆರೆ ಜನ ಸವಿದಿದ್ದಾರೆ. ಇಂದು ಗುರುವಾರ ಕೂಡ ಕುರಿಗಳ ಬಲಿ ನಡೆಯಲಿದ್ದು, ದಾವಣಗೆರೆಯಲ್ಲಿ ಇನ್ನೂ ಮೂರು ದಿನ ಬಾಡೂಟದ ಗಮ್ಮತ್ತು ಇರಲಿದೆ. ಕುರಿ ಚರ್ಮ ಐನೂರು ರೂಗಳವರೆಗೆ ಮಾರಾಟವಾಗಿದೆ.
ಬಿಗಿ ಭದ್ರತೆ, ಕೈತಪ್ಪಿದ ಮಕ್ಕಳು ಪೋಷಕರ ಮಡಿÀಲಿಗೆ: ಇಷ್ಟು ದೊಡ್ಡ ಜಾತ್ರೆ ನಡೆದರೂ ಮೊಬೈಲ್, ಆಭರಣಗಳು ಸೇರಿದಂತೆ ಯಾವುದೇ ರೀತಿ ಕಳವುಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಬ್ಬದ ನಿಮಿತ್ತ 1500 ಪೊಲೀಸರನ್ನು ನಿಯೋಜಿಸಲಾಗಿತ್ತು. 40 ಜನ ಮುಫ್ತಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ದೇವಸ್ಥಾನ ಆವರಣದಲ್ಲಿ ತೆರೆಯಲಾಗಿದ್ದ ಉಪ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ, ಅವರ ವಿವರಗಳನ್ನು ಪಡೆದು ಕಳುಹಿಸಲಾಗುತ್ತಿತ್ತು. ಕೈತಪ್ಪಿದ ಕೆಲವು ಮಕ್ಕಳನ್ನು ಪೊಲೀಸರ ಮೈಕ್ಗಳ ಮೂಲಕ ಕೂಗಿ ಹೇಳಿ ಪೋಷಕರ ಮಡಿಲು ಸೇರಿಸಿದರು.
ಸಿಕ್ಕಸಿಕ್ಕವರ ಮೇಲೆ ಹಲ್ಲೆ: ದೇವಿಗೆ ಬಲಿ ಕೊಟ್ಟ ಎನ್ನಲಾದ ಪ್ರಾಣಿಯ ಕಾಲುಗಳನ್ನು ಹಿಡಿದು ಯುವಕನೊಬ್ಬ ಜನರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಸಮೀಪ ಘಟನೆ ನಡೆದಿದ್ದು, ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ್ದು, ಜನರು ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದ್ದಾರೆ.
ರಾತ್ರಿ ಇಡೀ ಕಾದು ಕುಳಿತ ಡಿಸಿ-ಎಸ್ಪಿ: ಜಾತ್ರೆ ನಿಮಿತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಾತ್ರೆಯ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗಿತ್ತು. ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಶೇಖರ್, ಜಿಲ್ಲಾ ಪಂಚಾಯ್ತಿ ಸಿಇಓ ಗಿತ್ತೆ ಮಾದವ್ ವಿಠ್ಠಲ್ ರಾವ್ ದೇವಸ್ಥಾನ ಸ್ಥಳದಲ್ಲೇ ರಾತ್ರಿ ಇಡೀ ಕಾದು ಕುಳಿತು ಸೂಕ್ಷö್ಮವಾಗಿ ಆವಲೋಕಿಸಿದರು.
ಕೋಣ ಬಲಿ ನಡೆಯಿತೆ?: ಶ್ರೀ ದುರ್ಗಾಂಬಿಕಾ ದೇವಿಗೆ ಬಿಡಲಾಗಿದ್ದ ಕೋಣವನ್ನು ಬಸವರಾಜ್ ಪೇಟೆಯ ಚೌಡಮ್ಮ ದೇವಸ್ಥಾನ ಹಿಂಭಾಗ ಬಲಿ ಕೊಡಲಾಗಿದೆ ಎನ್ನಲಾಗಿದೆ. ಆರೇಳು ಹೊಡೆತಗಳಿಗೆ ಕೋಣ ಬಲಿಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಹಬ್ಬ ಕಳೆ ಬಂದಿತು ಎನ್ನಲಾಗಿದೆ. ಇದನ್ನು ತಳ್ಳಿ ಹಾಕಿರುವ ಜಿಲ್ಲಾಧಿಕಾರಿ ಮತ್ತು ಎಸ್ಪಿ ಪ್ರಾಣಿ ಬಲಿಯಂಥ ಕೃತ್ಯಗಳು ನಡೆದಿಲ್ಲ. ಭಕ್ತರು ಅತ್ಯಂತ ಭಕ್ತಿಪರವಶರಾಗಿ, ಮೂಢನಂಬಿಕೆಗಳಿAದ ದೂರವಾಗಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹಳೆ ನಗರದಲ್ಲಿ ಬಾಡೂಟದ ಘಮ:
ದಾವಣಗೆರೆ ಹಳೆ ಭಾಗ ಬಾಡೂಟದಿಂದ ಘಮ ಘಮಿಸುತ್ತಿತ್ತು. ಹಬ್ಬದ ನಿಮಿತ್ತ ಪ್ರತಿ ಮನೆ ಮುಂಭಾಗ ಪೆಂಡಾಲ್ ಹಾಕಲಾಗಿತ್ತು. ಬುಧವಾರ ಸಂಜೆ 7 ಗಂಟೆಯ ನಂತರ ಬಾಡೂಟಕ್ಕೆ
ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟರು. |